ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸುಸ್ಥಿರ ಬದುಕು ನಡೆಸಲು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಮಹಿಳೆಯರ ಆರೋಗ್ಯ ಅತಿ ಮುಖ್ಯ.
ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಕುಟುಂಬ ಸದೃಢವಾಗಿರುತ್ತದೆ, ಅದೇ ರೀತಿ ಮಹಿಳೆಯರೆಲ್ಲರೂ ಆರೋಗ್ಯವಾಗಿದ್ದರೆ ಇಡೀ ಸಮಾಜವೇ ಸದೃಢವಾಗಿರುತ್ತದೆ ಎಂಬ ಸಾರ್ವಕಾಲಿಕ ಸತ್ಯದೊಂದಿಗೆ ಮಹಿಳೆಯರಿಗಾಗಿಯೇ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಮತ್ತು ಕೆ.ಬಿ ಕ್ರಾಸ್ ವ್ಯಾಪ್ತಿಯ ಗ್ರಾಮೀಣ ಮಹಿಳೆಯರ ಆರೋಗ್ಯ ಸೇವೆಗೆ “ನಮ್ಮ ಆರೋಗ್ಯ ಕೇಂದ್ರಗಳು” ಪ್ರಾರಂಭವಾಗಿವೆ.
ಎಲ್ಲಾ ವಯೋಮಾನದ ಮಹಿಳೆಯರು ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಈ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಮಾಲೋಚಿಸಿ ಸೂಕ್ತ ಸಲಹೆ ಮತ್ತು ಪರಿಹಾರವನ್ನು ಪಡೆಯಬಹುದಾಗಿದೆ.
ಹಾಲ್ಕುರಿಕೆ ಮತ್ತು ಕೆ.ಬಿ ಕ್ರಾಸ್ ನ ಸುತ್ತಮುತ್ತಲ ಗ್ರಾಮಗಳ "ನಮ್ಮ ಆರೋಗ್ಯ ಕೇಂದ್ರ"ದಲ್ಲಿ ಆರೋಗ್ಯ ತರಬೇತಿ ಪಡೆದ ಸಖಿಯರು ಹಾಗು ಲ್ಯಾಬ್ ಟೆಕ್ನಿಷಿಯನ್ ಕಾರ್ಯನಿರ್ವಹಿಸುತ್ತಿದ್ದು, ಈ ಸಖಿಯರು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಸೌಕರ್ಯಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಸುತ್ತಾರೆ.
----------------------------------------------------------------------------------
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನವಿದೆ. ಈ ಸಂಸ್ಕೃತಿ ಜಗತ್ತಿಗೇ ಮಾದರಿಯೂ ಹೌದು. ಕುಟುಂಬವೊಂದರ ಯಶಸ್ಸು, ಶ್ರೇಯಸ್ಸು ಎಲ್ಲದರ ಹಿಂದೆ ಮಹಿಳೆಯ ತ್ಯಾಗ, ಶಕ್ತಿ ಇದ್ದೇ ಇರುತ್ತದೆ ಎಂಬುದು ಸತ್ಯ. ಆದಾಗ್ಯೂ ಕಾಲಮಾನದ ಬೆಳವಣಿಗೆಗಳು, ವಿಚಾರಗಳ ಪಲ್ಲಟಗಳ ಪರಿಣಾಮ ಮಹಿಳೆ ನಿರ್ಲಕ್ಷ್ಯಕ್ಕೆ ಒಳಗಾಗಿರಬಹುದು. ಆದರೆ ಕಾಲೋಚಿತ ಪ್ರಜ್ಞೆಗಳು ಅದರಿಂದ ಹೊರಬಂದು ಮಹಿಳೆಯ ಸ್ಥಾನಮಾನ ಕಾಪಾಡುವ ನಿಟ್ಟಿನಲ್ಲಿ ನೆರವಾಗಿವೆ. ಅದರ ಫಲವೇ ಇತ್ತೀಚಿನ ಮಹಿಳಾ ಸಬಲೀಕರಣದ ಯತ್ನಗಳು ಎನ್ನಬಹುದು.
ಬದುಕಿನ ಸಾರ್ಥಕತೆ ಇರುವುದು ಇನ್ನೊಬ್ಬರಿಗೆ ನೆರವಾಗುವುದರಲ್ಲಿ. ಈ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಅರ್ಥಪೂರ್ಣಗೊಳಿಸಲು ಹೊಸತೊಂದು ಪರಿಕಲ್ಪನೆಯ ಯೋಚನೆಯನ್ನು ಪರಿಣಾಮಕಾರಿ ಯೋಜನೆಯಾಗಿಸಿ ಕಾರ್ಯಗತಗೊಳಿಸುವ ಚಾಣಾಕ್ಷತೆ, ಧೈರ್ಯ, ಸಾಮರ್ಥ್ಯ, ಎಲ್ಲವೂ ಮೇಳೈಸಿಹ ವಿರಳ ಅಗ್ರಪಂಕ್ತಿಯಲ್ಲಿ ತಿಪಟೂರಿನ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಹಾಗು ಕಾಂಗ್ರೆಸ್ ಮುಖಂಡರಾದ ಶ್ರೀ ಸಿ.ಬಿ.ಶಶಿಧರ್ (ಟೂಡಾ) ರವರು.
ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸಮಾನತೆ ಜೊತೆಗೆ ಮಹಿಳೆಯರ ಆರೋಗ್ಯವೇ ನಾಡಿನ ಸಂಪತ್ತು ಎಂಬ ಧ್ಯೇಯ ವಾಕ್ಯದೊಂದಿಗೆ ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಿದ್ದಾರೆ.
ಮಹಿಳೆಯರಿಗಾಗಿಯೇ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಮತ್ತು ಕೆ.ಬಿ. ಕ್ರಾಸ್ ಗ್ರಾಮಗಳಲ್ಲಿ ಮಹಿಳೆಯರ ಆರೋಗ್ಯ ಸೇವೆಗೆ "ನಮ್ಮ ಆರೋಗ್ಯ ಕೇಂದ್ರ" ಗಳು
ಸಿದ್ದವಾಗಿವೆ.
ಮಹಿಳೆಯರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಖ್ಯಾತ ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್ ಎಂ ಜೆ ಎಸ್ ಪಿ ಆರ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಎಂ ಜೆ ಶ್ರೀಕಾಂತ್ ರವರು ಹಾಗು ಖ್ಯಾತ ಪ್ರಸೂತಿ ತಜ್ಞರಾದ ಡಾ.ಹೇಮಾ ದಿವಾಕರ್ ಅವರ ಸಹಯೋಗದೊಂದಿಗೆ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆ ಹಾಗೂ ಜನ ಸ್ಪಂದನ ಟ್ರಸ್ಟ್ ಸಹಕಾರದೊಂದಿಗೆ ತಿಪಟೂರಿನ ಕಾಂಗ್ರೆಸ್ ಮುಖಂಡರಾದ ಟೂಡಾ ಶಶಿಧರ ಆರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ನಮ್ಮ ಆರೋಗ್ಯ ಕೇಂದ್ರ.
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸುಸ್ಥಿರ ಬದುಕು ನಡೆಸಲು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಮಹಿಳಾ ಆರೋಗ್ಯ ಅತಿ ಮುಖ್ಯ. ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಕುಟುಂಬ ಸದೃಢವಾಗಿರುತ್ತದೆ. ಅದೇ ರೀತಿ ಮಹಿಳೆಯರೆಲ್ಲರೂ ಆರೋಗ್ಯವಾಗಿದ್ದರೆ ಇಡೀ ಸಮಾಜವೇ ಸದೃಢವಾಗಿರುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಹಾಲ್ಕುರಿಕೆ ಗ್ರಾಮದ ನಮ್ಮ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಆರೋಗ್ಯ ತರಬೇತಿ ಪಡೆದ ಸಖಿಯರು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಲಭ್ಯವಿರುವ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದುರ ಬಗ್ಗೆ ತಿಳಿಯಪಡಿಸುತ್ತಾರೆ.
"ನಮ್ಮ ಆರೋಗ್ಯ ಕೇಂದ್ರ"ಗಳು ಮಹಿಳೆಯರ ಆರೋಗ್ಯದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಸಂಜೀವಿನಿಯಾಗಲಿದೆ. ಎಲ್ಲಾ ವಯೋಮಾನದ ಹೆಣ್ಣು ಮಕ್ಕಳಿಗೆ ಅವರ ಜೀವನದಲ್ಲಿ ವಯಸ್ಸಿಗನುಗುಣವಾಗಿ ಪ್ರತಿ ಹಂತದಲ್ಲಿ ಬರುವ ಆರೋಗ್ಯ ಸಮಸ್ಯೆಗಳಿಗೆ ಸಲಹೆ, ಸಮಾಲೋಚನೆ ಹಾಗೂ ವಿಡಿಯೋ ಕನ್ಸಲ್ಟೇಷನ್ ಮೂಲಕ ಸೂಕ್ತ ಪರಿಹಾರ ದೊರೆಯಲಿದೆ.
"ನಮ್ಮ ಆರೋಗ್ಯ ಕೇಂದ್ರ - ನಮ್ಮ ಆರೋಗ್ಯ ಸಖಿ"
ಮಹಿಳೆಯರಿಂದ - ಮಹಿಳೆಯರಿಗಾಗಿ - ಮಹಿಳೆಯರಿಗೋಸ್ಕರ
ಆರೋಗ್ಯ ಕೇಂದ್ರಗಳ ಸೇವೆಗಳ ವಿವರ.
ನಮ್ಮ ಆರೋಗ್ಯ ಕೇಂದ್ರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಅಂದರೆ ವಾರದಲ್ಲಿ ೫ ದಿನಗಳ ಕಾಲ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ, ಕೇಂದ್ರದಲ್ಲಿ ಇಬ್ಬರು ನುರಿತ ಆರೋಗ್ಯ ಸಖಿಯರು ಅನಾರೋಗ್ಯ ಪೀಡಿತ ಮಹಿಳೆಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ವಿಡಿಯೋ ಕನ್ಸಲ್ಟೇಷನ್ ಮುಖಾಂತರ ರಾಜ್ಯದ 400ಕ್ಕೂ ಹೆಚ್ಚು ಸ್ತ್ರೀರೋಗ ಹಾಗು ಪ್ರಸೂತಿ ತಜ್ಞರಿರುವ ತಂಡದೊಂದಿಗೆ ಡಾ. ಹೇಮಾ ದಿವಾಕರ್ ಅವರ ಸಲಹೆಯಂತೆ ಸಮಾಲೋಚನೆ ನಡೆಸಿ, ಪ್ರಾಥಮಿಕ ಚಿಕಿತ್ಸೆ ಮತ್ತು ಔಷದೋಪಾಚಾರ ನೀಡುತ್ತಾರೆ. ಹಾಗು ಜಟಿಲ/ತೀವ್ರತರವಾದ ಅನಾರೋಗ್ಯ ಪೀಡಿತರಿಗೆ ಯಾವ ವೈದ್ಯರು ಸೂಕ್ತ ಎಂದು ಸಲಹೆ ನೀಡುತ್ತಾರೆ.